ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಮಳೆ ಆಶ್ರಿತ ಪ್ರದೇಶವಾಗಿದ್ದು, ಇಲ್ಲಿನ ರೈತರು ಶುಂಠಿ ಮತ್ತು ಜೋಳವನ್ನು ಬೆಳೆಯುತ್ತಾರೆ. ಆದರೆ ಅದಕ್ಕೂ ಸರಿಯಾದ ದರ ಸಿಗದಿರುವುದರಿಂದ ಲಕ್ಷಾಂತರ ರೈತರು ತಂಬಾಕು ಬೆಳೆಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ರೈತರು ಉತ್ತಮವಾದ ತಂಬಾಕನ್ನು ಬೆಳೆಯುತ್ತಿದ್ದಾರೆ. ಆದರೆ ತಂಬಾಕು ಬೆಳೆಗಾರರಿಗೆ ಸರಿಯಾದ ದರ ಸಿಗದೇ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾರೆ. ತಂಬಾಕು ಬೆಳೆಗಾರರು ಉತ್ಕೃಷ್ಟವಾದ ತಂಬಾಕನ್ನು ಬೆಳೆದರೆ ಅವರಿಗೆ ಉತ್ತಮ ದರ ಸಿಗುತ್ತದೆ ಎಂದು ನೀವು ಭರವಸೆ ನೀಡಿದ್ದೀರಾ, ಆದುದರಿಂದ ಅವರ ತಂಬಾಕನ್ನು ನೀವು ಹೆಚ್ಚು ದರ ನೀಡಿ ಖರೀದಿ ಮಾಡಬೇಕಾಗುತ್ತದೆ ಎಂದು ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ಐಟಿಸಿ ಹಾಗೂ ಇತರೆ ಕಂಪೆನಿಯವರಿಗೆ ಒತ್ತಾಯಿಸಿದರು. ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ತಂಬಾಕು ಬೆಳೆಗಾರರು ಮತ್ತು ಖರೀದಿದಾರರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.ತಂಬಾಕು ಮಂಡಳಿಯವರು ರೈತರಿಗೆ ವರ್ಷದಲ್ಲಿ ಇಂತಿಷ್ಟೇ ತಂಬಾಕು ಬೆಳೆಯ ಬೇಕು ಎಂದು ನಿಗದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ನಷ್ಟ ಅನುಭವಿಸುವುದು ತಪ್ಪುತ್ತದೆ. ಈ ತಂಬಾಕು ಬೆಳೆಗಾರರ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಸರಕಾರದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ನಾವು ನಿರ್ಧಾರ ತೆಗೆದುಕೊಳ್ಳಬೇಕು. ನಾನು ಮುಖ್ಯಮಂತ್ರಿಯಲ್ಲಿ ಮನವಿ ಮಾಡಿ ನೇರವಾಗಿ ಸರಕಾರವೇ ತಂಬಾಕನ್ನು ಖರೀದಿ ಮಾಡಬೇಕು ಹಾಗೂ ಬೆಂಬಲ ಬೆಲೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು. ತಂಬಾಕು ಬೆಳೆಗಾರ ಹುಣಸೇಕುಪ್ಪೆ ಚಂದ್ರು ಮಾತನಾಡಿ, 4 ಮತ್ತು 5ನೇ ದರ್ಜೆ ತಂಬಾಕಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ದರದಲ್ಲಿ ತಾರತಮ್ಯ ವಾಗುತ್ತಿದೆ ಇದರಿಂದ ನಷ್ಟ ಅನುಭವಿಸುವಂತಾಗಿದೆ ನಾವು ಹಾಕುವ ಬಂಡವಾಳಕ್ಕಿಂತ ನಮಗೆ ಸಿಗುವ ದರ ಕಡಿಮೆಯಾಗುತ್ತಿದೆ ಇದರಿಂದ ಸಾಲದ ಹೊರೆ ಜಾಸ್ತಿಯಾಗುತ್ತಿದೆ ಆದುದರಿಂದ ತಮಗೆ ಸರಿಯಾದ ದರ ನೀಡಬೇಕೆಂದು ಒತ್ತಾಯಿಸಿದರು.ಇಂಡಿಯನ್ ಟೊಬ್ಯಾಕೊ ಕಂಪನಿಯ ಲೀಪ್ ವ್ಯವಸ್ಥಾಪಕ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಕಳೆದ 50 ವರ್ಷಗಳಿಂದ ತಾಲೂಕಿನಲ್ಲಿ ರೈತರು ವಾಣಿಜ್ಯ ಬೆಳೆಯದ ತಂಬಾಕು ಬೆಳೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಈ ಭಾಗದ ರೈತರು ಉತ್ಕೃಷ್ಟವಾದ ತಂಬಾಕು ಬೆಳೆಯನ್ನು ಬೆಳೆಯುತ್ತಿದ್ದಾರೆ. ನಾವೂ ಸಹ ರೈತರಿಗೆ ತಂಬಾಕು ಬೆಳೆಯಲು ಎಲ್ಲಾ ರೀತಿಯ ಸಹಕಾರ ಮಾರ್ಗದರ್ಶನ ಕೊಡುತ್ತಿದ್ದೇವೆ ನಾವು ಖರೀದಿಸುವ ತಂಬಾಕಲ್ಲಿ ಶೇಕಡಾ 15% ರಷ್ಟು ಮಾತ್ರ ಸ್ವದೇಶದಲ್ಲಿ ಬಳಕೆಯಾಗುತ್ತದೆ. ಶೇಕಡಾ 80% ರಷ್ಟು ತಂಬಾಕು ವಿದೇಶಿ ಕಂಪನಿಗಳಿಗೆ ರಫ್ತಾಗುತ್ತದೆ. ವಿದೇಶದಲ್ಲಿ ತಂಬಾಕಿಗೆ ಬೇಡಿಕೆ ಹೆಚ್ಚಾಗಿದ್ದು ಈ ವರ್ಷ ಕೊರೋನಾ ಸಂಕಷ್ಟದಿಂದ ಯಾವುದೇ ವಿದೇಶಿ ಕಂಪನಿಗಳು ತಂಬಾಕು ಆಮದಿಗೆ ಮುಂದಾಗುತ್ತಿಲ್ಲ ಈ ಕಾರಣದಿಂದ ತಂಬಾಕಿನ ಸರಾಸರಿ ದರದಲ್ಲಿ ವ್ಯತ್ಯಯವಾಗಿದ್ದು, ನಮ್ಮಿಂದ ಆಗುವ ಎಲ್ಲಾ ಸಹಾಯ ಸಹಕಾರ ನೀಡಿ ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ತಂಬಾಕು ಬೆಳೆಗಾರರಿಗೆ ಖಚಿತವಾಗಿ ಉತ್ತಮ ಬೆಲೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ,ಹರಾಜು ಅಧೀಕ್ಷಕ ಮಂಜುನಾಥ್ ‘ರೈತ ಮುಖಂಡರಾದ ಅಣ್ಣಯ್ಯ ಶೆಟ್ಟಿ, ರಾಮನಾಥತುಂಗ ಶ್ರೀನಿವಾಸ್’ ಮಲ್ಲಿಕಾರ್ಜುನ್, ನಾಗೇಂದ್ರ ,ಹಾಗೂ ಬೆಳೆಗಾರರು ವಿವಿಧ ಕಂಪೆನಿಯ ವ್ಯವಸ್ಥಾಪಕರು ಹಾಜರಿದ್ದರು.
ವರದಿ-ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ