ಬೆಂಗಳೂರು: ರೈತರ ಪಾಲಿಗೆ ಮರಣಶಾಸನವಾಗಲಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಅತ್ತ ದೆಹಲಿಯ ಸಿಂಘು ಗಡಿಯಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ರೈತರು ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಬಿಜೆಪಿ ಪ್ರತಿಭಟನಾನಿರತ ರೈತರ ವಿರುದ್ಧವೇ ಅಭಿಯಾನ ನಡೆಸಲು ಮುಂದಾಗಿದೆ. ರೈತರ ಪ್ರತಿಭಟನೆಗೆ ಸಡ್ಡು ಹೊಡೆದಿರುವ ಬಿಜೆಪಿ ರೈತರ ಪ್ರತಿಭಟನೆ ವಿರುದ್ಧ ಪ್ರತಿತಂತ್ರ ರೂಪಿಸಿದ್ದು ‘ವಿವಾದಾತ್ಮಕ ಕೃಷಿ ಕಾನೂನುಗಳು ರೈತರ ಪರವಾಗಿವೆ’ಎಂದು ದೇಶಾದ್ಯಂತ ಪ್ರಚಾರ ನಡೆಸಲು ಮುಂದಾಗಿದೆ.ಈ ಅಭಿಯಾನದ ಅಂಗವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ಒಟ್ಟು 700 ಕಡೆ ಪತ್ರಿಕಾಗೋಷ್ಠಿಗಳನ್ನು ನಡೆಸಲಿದೆ. ಅಲ್ಲದೆ 700 ಕಡೆ ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ. ಬಿಜೆಪಿಯು ಈ ಮೂಲಕ ‘ತಾನು ಯಾವ ಕಾರಣಕ್ಕೂ ರೈತರ ಪ್ರತಿಭಟನೆಗೆ ಮಣಿಯುವುದಿಲ್ಲ’ ಎಂದು ಸಾರಿ ಹೇಳಿದೆ.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು