ಶಹಾಪುರ:ಇಂದಿನ ಪ್ರಜ್ಞಾವಂತ ಯುವಕರು ತಮ್ಮ ಅಮೂಲ್ಯವಾದ ಮತಗಳನ್ನು ಯಾವುದೇ ಕಾರಣಕ್ಕೆ ಹಣ ಮತ್ತು ಹೆಂಡಕ್ಕೆ ಮಾರಿಕೊಳ್ಳವುದು ಸರಿಯಲ್ಲ, ಅಲ್ಲದೆ ಮದ್ಯ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಬೇಕಾದ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಮಾಜ ಚಿಂತಕ ಚಂದ್ರಶೇಖರ ಬಾನಾಳ ಹೇಳಿದರು.ರಾಜ್ಯದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಜಿದ್ದಾಜಿದ್ದಿನ ಕಣವಾಗಿ ರಂಗೇರುತ್ತಿರುವ ಹಿನ್ನೆಲೆಯಲ್ಲಿ ಯುವಕರು ಸಂಪೂರ್ಣವಾಗಿ ಕುಡಿತದ ದಾಸ್ಯಕ್ಕೆ ಒಳಗಾಗಿ ತಮ್ಮ ಮುಂದಿನ ಉತ್ತಮ ಭವಿಷ್ಯದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಯಾವುದೇ ಜಾತಿ ಜನಾಂಗಕ್ಕೆ ಹಾಗೂ ಪಕ್ಷಕ್ಕೆ ಜೋತು ಬೀಳದೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವ ಉತ್ತಮ ವ್ಯಕ್ತಿಗಳಿಗೆ ಮತ ನೀಡಿ,ಅಲ್ಲದೆ ಈ ಬಾರಿ ಚುನಾವಣೆ ಪಾರದರ್ಶಕತೆಯಿಂದ ನಡೆಯಲಿ ಎಂಬುದೆ ನಮ್ಮ ಮುಖ್ಯ ಉದ್ದೇಶವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮತದಾನದ ಗೌರವ ಉಳಿಸಿಕೊಳ್ಳುವುದು ಮುಖ್ಯವಾಗಿದೆ,ಯಥಾ ರಾಜ ತಥಾ ಪ್ರಜಾ ಎಂಬುವುದನ್ನು ಮರೆತು ಯಥಾ ಪ್ರಜಾ ತಥಾ ಪ್ರತಿನಿಧಿ ಎಂಬಂತಾಗಲಿ. ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅವಶ್ಯಕತೆಯಿದೆ,ಪ್ರತಿಯೊಬ್ಬ ಪ್ರಜೆಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸ ಇನ್ನೂ ಹೆಚ್ಚೆಚ್ಚು ನಡೆದಾಗ ಮಾತ್ರ ಉತ್ತಮ ಸಮಾಜ ದೇಶ ನಿರ್ಮಾಣವಾಗಲು ಸಾಧ್ಯ ಎಂದು ಸಲಹೆ ನೀಡಿದರು.
ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ