ಬಾಗೇಪಲ್ಲಿ: ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗಾ ತಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೊರೊನಾದಿಂದಾಗಿ ಕಾಲೇಜ್ ಗಳು ಕೆಲತಿಂಗಳಿಂದ ಲಾಕ್ ಆಗಿದ್ದವು. ಇದೇ ಜನವರಿ ಒಂದರಿಂದ ಕಾಲೇಜ್ ಗಳು ಪುನಃ ಆರಂಭವಾಗಿದ್ದು,ವಿದ್ಯಾರ್ಥಿನಿಯರು ಕಾಲೇಜ್ ಮುಗಿಸಿ ಸ್ವಗ್ರಾಮಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದು ಬಸ್ ಗಾಗಿ ಕಾಯುತ್ತಿದ್ದರು. ಹೀಗಿರುವಾಗ ಆಂಧ್ರ ಪ್ರದೇಶದ ಕೊಡೂರು ಮೂಲದ ಪುಂಡ ಯುವಕರ ಗುಂಪು ಪ್ರತಿನಿತ್ಯ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿತ್ತು. ಆದ್ರೆ ಇಂದು ಬೀದಿ ಕಾಮಣ್ಣರ ಗ್ರಹಚಾರ ಕೆಟ್ಟಿತ್ತು. ಎಂದಿನಂತೆ ಸ್ವಗ್ರಾಮಗಳಿಗೆ ತೆರಳಲು ವಿದ್ಯಾರ್ಥಿನಿಯರು ಬಸ್ ನಿಲ್ದಾಣಕ್ಕೆ ಬಂದಾಗ ಈ ನಾಲ್ವರು ಕಾಮಣ್ಣರು ವಿದ್ಯಾರ್ಥಿನಿಯರನ್ನು ಚುಡಾಯಿಸಲು ಮುಂದಾಗಿದ್ದಾರೆ. ತಕ್ಷಣ ಅಲ್ಲಿಯೇ ಇದ್ದ ಸಾರ್ವಜನಿಕರು ಬೀದಿ ಕಾಮಣ್ಣರಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾಿರೆ. ಪದೇ ಪದೇ ಪುಂಡರ ಹಾವಳಿಯಿಂದ ಬೇಸತ್ತಿದ್ದ ವಿದ್ಯಾರ್ಥಿನಿಯರು ಪುಂಡರಿಗೆ ಧರ್ಮದೇಟು ಬಿದ್ದಿರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ವರದಿ-ಯಶ್ವಂತ್ ಎಕ್ಸ್ ಪ್ರೆಸ್ ಟಿವಿ ಬಾಗೇಪಲ್ಲಿ