ಚಿಕ್ಕಬಳ್ಳಾಪುರ: ತೋಟದ ಮನೆಗೆ ನುಗ್ಗಿದ ಚಿರತೆ, ಮೇಕೆ ಮತ್ತು ಕುರಿಗಳನ್ನು ಬಲಿ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸೊಣ್ಣೆನಹಳ್ಳಿ ಉಮೇಶ್ ರ ತೋಟದ ಮನೆಗೆ ನುಗ್ಗಿರುವ ಚಿರತೆ. 3 ಮೇಕೆ ಹಾಗೂ 1 ಕುರಿಯನ್ನು ಕಚ್ಚಿ ಕೊಂದು ಹಾಕಿದೆ. ಅಲ್ಲದೆ ಮತ್ತೊಂದು ಕುರಿಯ ಮೇಲೆ ದಾಳಿ ಮಾಡಿದ್ದು ಅದು ಸಹ ತೀವ್ರವಾಗಿ ಗಾಯಗೊಂಡಿದೆ. ಸುಮಾರು 30 ಸಾವಿರಕ್ಕು ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎಂದಿನಂತೆ ಸಂಜೆ ರೈತ ಉಮೇಶ್ ಹಸುವಿನ ಹಾಲು ಕರೆದು ಮನೆಗೆ ಕೊಂಡೊಯ್ದಿದ್ದ ವೇಳೆ, ತೋಟದ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಹೊಂಚು ಹಾಕಿದ್ದ ಚಿರತೆ ತೋಟದ ಮನೆಗೆ ನುಗ್ಗಿ ಮೇಕೆ ಹಾಗೂ ಕುರಿಯ ಮೇಲೆ ದಾಳಿ ನಡೆಸಿ ರಕ್ತ ಹೀರಿ ಸಾಯಿಸಿದೆ.ಮಾಕಳಿ ಬೆಟ್ಟದ ತಪ್ಪಲಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತಿತ್ತು.ಮಾಕಳಿ ಬೆಟ್ಟದ ತಪ್ಪಲಿನ ಗ್ರಾಮಸ್ಥರಿಗೆ ಕಳೆದ ಕೆಲ ದಿನಗಳಿಂದ ಮತ್ತೆ ಚಿರತೆ ಆತಂಕ ಆರಂಭವಾಗಿದ್ದು, ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದು ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ