ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಖತ್ ಆಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿರುವ ರೈತರ ಜಮೀನಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಬಂದಿರಲಿಲ್ಲ. ಹೀಗಾಗಿ ಜಮೀನಿಗೆ ಬಾರದ ಡಿಸಿ ವಿರುದ್ಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಗರಂ ಆದರು.
ಬೆಳಿಗ್ಗೆ ಸಚಿವರು ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಹಣವಾಳ,ಸಿಂಗನಾಳ, ಸಿಂಗನಾಳ ಕ್ಯಾಂಪ್, ಜಿರಾಳ ಕಲ್ಲಗುಡಿ ರೈತರ ಹೊಲಗಳಿಗೆ ಭೇಟಿ ನೀಡಿದ್ದರು.ಈ ವೇಳೆ ಕೆಲ ಶಾಸಕರು,ಕೃಷಿ,ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಚಿವರ ಜೊತೆ ಬೆಳೆಹಾನಿ ವೀಕ್ಷಣೆಗೆ ಆಗಮಿಸಿದ್ದರು.ಆದರೆ ಜಿಲ್ಲಾಧಿಕಾರಿಗಳು ಬಂದಿರಲಿಲ್ಲ.
ಜಿಲ್ಲಾಡಳಿತ ಭವನದಲ್ಲಿ ಸಭೆಗೆ ಆಗಮಿಸಿದ ಸಚಿವರು, ಅಲ್ಲಿದ್ದ ಡಿಸಿಗೆ ಬೆಳೆಹಾನಿ ವೀಕ್ಷಣೆಗೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು? ಆಗ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು,ಬೇರೆ ಕೆಲಸದ ನಿಮಿತ್ತ ಬರಲಾಗಲಿಲ್ಲ ಎಂದರು.
ಡಿಸಿ ಉತ್ತರಕ್ಕೆ ತೃಪ್ತರಾಗದ ಸಚಿವ ಬಿ.ಸಿ.ಪಾಟೀಲ್ ಅವರು, ಅಲ್ಲಿ ರೈತರ ಬೆಳೆ ನಾಶವಾಗಿದೆ.ರೈತರು ಸಂಕಟಪಡುತ್ತಿದ್ದಾರೆ. ಕಚೇರಿಯಲ್ಲಿ ಕುಳಿತು ಏನು ಮಾಡುತ್ತೀರಾ ? ಇದೇನಾ ನಿಮ್ಮ ಜವಾಬ್ದಾರಿ? ತುರ್ತು ಇಲ್ಲದ ಉಳಿದ ಕೆಲಸ ಎಲ್ಲ ಬಿಟ್ಟು ಮೊದಲು ರೈತರ ಕೆಲಸ ಮಾಡಿ ಎಂದು ಸೂಚಿಸಿದರು.
ನಾಭೀರಾಜ್ ದಸ್ತೆನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ