ಆನೇಕಲ್(ಬೆಂ.ನಗರ):ಇಡೀ ದೇಶದ ಉದ್ದಗಲಕ್ಕೂ ಮಾರಕ ಕೊರೊನಾ ವೈರಸ್ ಹಾವಳಿ ಎಲ್ಲೆ ಮೀರಿದೆ.ಪರಿಣಾಮ ಅದೆಷ್ಟೋ ಮಂದಿ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ.ಇದರ ನಡುವೆ ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಾಸಕರೊಬ್ಬರು ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ಕಿಯನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಹೌದು,ಬೆಂಗಳೂರು ಹೊರವಲಯದ ಆನೇಕಲ್ನ ಸರ್ಜಾಪುರ ಸಮೀಪದ ತೋಟದ ಗೋದಾಮಿನಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯ ಶಾಸಕ ಬಿ ಶಿವಣ್ಣ, ತಹಶೀಲ್ದಾರ್ ಮಹಾದೇವಯ್ಯ, ಸರ್ಜಾಪುರ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಬಿಜೆಪಿ ಮುಖಂಡ ಮಂಜುನಾಥ ರೆಡ್ಡಿ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಹರ್ಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು ೪ ಸಾವಿರಕ್ಕೂ ಅಧಿಕ ಪಡಿತರ ಅಕ್ಕಿ ಚೀಲಗಳು ಪತ್ತೆಯಾಗಿವೆ. ಅಂದಹಾಗೆ ಬಡ ಜನರಿಗೆ ನೀಡುವ ಮೂರು ಟನ್ಗೂ ಅಧಿಕ ಪಡಿತರ ಅಕ್ಕಿಯನ್ನು ಈ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ.
ಅಲ್ಲದೆ,ಗೋದಾಮಿಗೆ ಕಿಡಕಿ ಬಾಗಿಲು ಸಹ ಇಲ್ಲ. ಜೊತೆಗೆ ಸಾರ್ವಜನಿಕರಿಗೆ ವಿತರಿಸಬೇಕಾದ ಅಕ್ಕಿ ಖಾಸಗಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವುದರ ಹಿಂದೆ ಅಕ್ರಮ ಅಡಗಿದೆ. ಹಾಗಾಗಿ ಇಡೀ ಗೋದಾಮು ಕೂಡಲೇ ಸೀಜ್ ಮಾಡಬೇಕು ಮತ್ತು ತನಿಖೆ ಆಗಬೇಕು ಎಂದು ಸ್ಥಳೀಯ ಶಾಸಕ ಬಿ ಶಿವಣ್ಣ ಒತ್ತಾಯಿಸಿದ್ದಾರೆ.
ಇನ್ನೂ ಮೇಲ್ನೋಟಕ್ಕೆ ಸರ್ಕಾರದ ಕಾನೂನು ಉಲ್ಲಂಘನೆ ಮಾಡಿ ಪಡಿತರ ಅಕ್ಕಿ ಖಾಸಗಿ ಗೋದಾಮಿನಲ್ಲಿ ಸಂಗ್ರಹ ಮಾಡಲಾಗಿದೆ. ನಮ್ಮ ತಾಲ್ಲೂಕಿನ ಮೂರು ಕಡೆ ಮಾತ್ರ ಸಂಗ್ರಹ ಮಾಡುವ ಅವಕಾಶ ಇದೆ. ಒಂದು ವೇಳೆ ಕೊರೊನಾ ಸಂದರ್ಭದಲ್ಲಿ ಹೆಚ್ಚು ದಾಸ್ತಾನು ಅವಶ್ಯಕತೆ ಇದ್ದರೆ ತಾಲ್ಲೂಕು ಆಡಳಿತದ ಸಾಕಷ್ಟು ಕಟ್ಟಡಗಳು ವಶದಲ್ಲಿದ್ದು,ಅವುಗಳನ್ನು ಬಳಕೆ ಮಾಡಬಹುದಿತ್ತು. ಈಗಾಗಲೇ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದು, ತಪ್ಪು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ತಹಶಿಲ್ದಾರ್ ತಿಳಿಸಿದ್ದಾರೆ.
ಇದೇ ವೇಳೆ ಖಾಸಗಿ ಗೋದಾಮಿನಲ್ಲಿ ಸಿಕ್ಕ ಪಡಿತರ ಅಕ್ಕಿ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘಕ್ಕೆ ಸೇರಿದ್ದು, ಸರ್ಜಾಪುರ ಭಾಗದ ಪಡಿತರ ಅಂಗಡಿಗಳಿಗೆ ವಿತರಿಸಲು ಕೇಂದ್ರ ರಾಜ್ಯ ಸರ್ಕಾರ ಈ ಬಾರಿ ಹೆಚ್ಚುವರಿಯಾಗಿ ನೀಡಿದೆ.
ಹಾಗಾಗಿ ಸ್ಥಳಾವಕಾಶ ಇಲ್ಲದೆ ಖಾಸಗಿ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ.ಸರ್ಕಾರಿ ಕಟ್ಟಡಗಳನ್ನು ಬಳಸ ಬೇಕಿತ್ತು. ಆದ್ರೆ ಹತ್ತಿರವಿದೆ ಎಂದು ಖಾಸಗಿ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದೆ.ಎಲ್ಲಾ ದಾಖಲೆಗಳು ಇವೆ. ಯಾವುದೇ ಅಕ್ರಮ ನಡೆಸಿಲ್ಲ ಎನ್ನುತ್ತಾರೆ ರೇಷ್ಮೆ ಬೆಳೆಗಾರರು ತಮ್ಮ ರೈತ ಸೇವಾ ಸಹಕಾರ ಸಂಘದ ಅಧಿಕಾರಿಗಳು..
ಒಟ್ನಲ್ಲಿ ಮಹಾಮಾರಿ ಕೊರೊನಾ ಹಾವಳಿಯಿಂದ ಅದೆಷ್ಟೋ ಮಂದಿ ಬೀದಿ ಪಾಲಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.ಆದ್ರೆ ಇಂತಹ ಅನಾಥರಿಗೆ ನಿರ್ಗತಿಕರಿಗೆ ವಿತರಿಸಲಿ ಎಂದು ನೀಡಿದ ಪಡಿತರ ಅಕ್ಕಿಯನ್ನು ಸಮರ್ಪಕವಾಗಿ ದಾಸ್ತಾನು ಮಾಡದಿರುವುದನ್ನು ಗಮನಿಸಿದರೆ ಸಂಬAಧಪಟ್ಟ ಅಧಿಕಾರಿಗಳ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸತ್ಯ ಹೊರತೆಗೆಯಬೇಕಿದೆ..
ಸಿ.ಕಾರ್ತಿಕ್ ಎಕ್ ್ಸಪ್ರೆಸ್ ಟಿವಿ ಆನೇಕಲ್(ಬೆಂ.ನಗರ)