ಮಳವಳ್ಳಿ: ಕೋವಿಡ್ ನಿಂದ ಸಂಕಷ್ಟದಲ್ಲಿ ಇರುವ ಜನರಿಗೆ ಸೂಕ್ತ ಪರಿಹಾರ, ಜನಪರ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪಟ್ಟಣದಲ್ಲಿ ಮಿನಿ ವಿಧಾನಸೌಧ ಚಲೋ ಪ್ರತಿಭಟನೆ ನಡೆಸಿದರು. ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಸಿಐಟಿಯುನ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮೆರವಣಿಗೆ ಹೊರಟ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ದ ಧಿಕ್ಕಾರ ಕೂಗುತ್ತಾ ಮಳವಳ್ಳಿಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯುನ ಕಾರ್ಯದರ್ಶಿ ತಿಮ್ಮೇಗೌಡ ಮಾತನಾಡಿ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದು, ನಿಯಂತ್ರಣದ ಹೆಸರಿನಲ್ಲಿ ದೇಶದಲ್ಲಿ ರಾಷ್ಟ್ರೀಯ ಲಾಕ್ ಡೌನ್ ಹೇರಲಾಯಿತು. ಇದ್ದರಿಂದ ದೇಶದ ಕಾರ್ಮಿಕರು ಹಾಗೂ ಜನರು ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ಕೂಡಲೇ ತಡೆಹಿಡಿದಿರುವ ಕಾರ್ಮಿಕರ ತುಟ್ಟಿಭತ್ಯೆ ಆದೇಶ, ಕಾರ್ಮಿಕರ ಬಾಕಿ ವೇತನ, ಬೋನಸ್, ಭವಿಷ್ಯನಿಧಿ ಇಎಸ್ಐ ಜಾರಿ ಮಾಡಬೇಕು ಹಾಗೂ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರ ಖಾಯಂಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಮಿಕರ ವಿಧಾನಸೌಧ ಚಲೋ ಬೆಂಬಲಿಸಿ ನಾವುಗಳು ಸಹ ಪಟ್ಟಣದ ಮಿನಿ ವಿಧಾನಸೌಧ ಚಲೋ ಹೋರಾಟ ನಡೆಸಲಾಗುತ್ತಿದೆ ಎಂದರು. ಇನ್ನೂ ಸಿಐಟಿಯು ರಾಜ್ಯ ಕಾರ್ಯದರ್ಶಿ ರಾಮಕೃಷ್ಣ ಸಹ ಮಾತನಾಡಿದರು. ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಪಿ.ಕುಮಾರ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ದೇವಿ, ಯೋಗೇಶ್, ಮಟ್ಟೇಸ್ವಾಮಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಲತಾ, ಗೌರಮ್ಮ, ಕೃಷ್ಣ, ಹರೀಶ್, ಸುನಂದಾ, ಜಯಶೀಲಾ ಸೇರಿದಂತೆ ಹಲವರು ಇದ್ದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ