ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಸಚಿವಾಕಾಂಕ್ಷಿಗಳು ಹೆಚ್ಚಾಗುತ್ತಿದ್ದು, ಇದೀಗ ಸಂಪುಟ ವಿಸ್ತರಣೆಯೋ..? ಅಥವಾ ಪುನಾರಚನೆಯೋ ಎಂಬ ಪ್ರಶ್ನೆ ಇದೀಗ ಪ್ರಶ್ನೆ ಎದುರಾಗಿದೆ. ಸಂಪುಟ ಪುನಾರಚನೆ ಬದಲು ಸಂಪುಟ ವಿಸ್ತರಣೆ ಮಾಡಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚೆ ನಡೆಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಹೈಕಮಾಂಡ್ ಬುಲಾವ್ ನೀಡಿದೆ ಎನ್ನಲಾಗಿದೆ. ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಸಿ.ಟಿ ರವಿ ನೇಮಕ ಮಾಡಲಾಗಿದ್ದು,ಹೀಗಾಗಿ ಸಚಿವ ಸ್ಥಾನ ತೊರೆಯಲು ಸಿಟಿ ರವಿ ಸಿದ್ಧರಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿರುವ ರವಿ, ಮೂರ್ನಾಲು ದಿನಗಳಲ್ಲಿ ತಮ್ಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಈ ಬಾರಿ ನಡೆಯುವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಹಲವು ಬಾರಿ ಸಚಿವ ಸ್ಥಾನ ನೀಡದಿದ್ದ ಕಾರಣ ತಮ್ಮ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದ ಬಿಜೆಪಿ ಶಾಸಕರಿಗೆ ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈಗಾಗಲೇ 6 ಸಚಿವ ಸ್ಥಾನ ಖಾಲಿ ಇದ್ದು, ನಾಲ್ವರು ಸಚಿವರಿಂದ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ.ಒಟ್ಟು 10 ಸಚಿವ ಸ್ಥಾನ ಖಾಲಿ ಆಗಲಿದ್ದು, ಅದರಲ್ಲಿ 8 ಸಚಿವ ಸ್ಥಾನ ತುಂಬಲು ಮುಂದಾಗಿದ್ದಾರೆ. ಎಂ.ಟಿ.ಬಿ ನಾಗರಾಜ್ ಹಾಗು ಆರ್.ಶಂಕರ್ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.ಇದರ ಜೊತೆಗೆ ಉಮೇಶ್ ಕತ್ತಿ, ಬಸವನಗೌಡ ಪಾಟೀಲ್ ಯತ್ನಾಳ್,ಅರವಿಂದ್ ಲಿಂಬಾವಳಿ, ಎಸ್ ಅಂಗಾರ, ಸುನೀಲ್ ಕುಮಾರ್ ಅಥವಾ ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು