ದೇವದುರ್ಗ;ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯ ಪಲಕನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಂದಲಿ ಗ್ರಾಮದಲ್ಲಿ ಶನಿವಾರದಿಂದ ಸತತವಾಗಿ ಮಳೆ ಬಂದಿದ್ದು ಭಾನುವಾರ ಮಳೆಗೆ ಮನೆಯ ಗೋಡೆ ಕುಸಿದು ಎಂಟು ಕುರಿಗಳು ಸಾವನ್ನಪ್ಪಿರುವ ಘಟನೆ ಜರುಗಿದೆ. ಕುರಿಗಾಹಿ ಹನುಮಂತಪ್ಪ ಭೀಮಪ್ಪ ನಸಿ ವಂದಲಿ ಅವರು ಗ್ರಾಮದಲ್ಲಿ ಕುರಿ ಸಾಕಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.ಶನಿವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದ್ದು, ಮನೆಯ ಗೋಡೆ ಪಕ್ಕದಲ್ಲಿಯೇ ಕುರಿ ಹಟ್ಟಿ ನಿರ್ಮಿಸಿಕೊಂಡಿದ್ದರು. ಮಳೆಯ ನೀರಿನಿಂದಾಗಿ ಶಿಥಿಲವಾಗಿದ್ದ ಗೋಡೆಯ ಒಂದು ಭಾಗ ಕುರಿಹಟ್ಟಿಯ ಮೇಲೆ ಬಿದ್ದ ಪರಿಣಾಮ ಎಂಟು ಕುರಿಗಳು ಸ್ಥಳದಲ್ಲಿ ಮೃತ ಪಟ್ಟರೆ, ಅನೇಕ ಕುರಿಗಳಿಗೆ ಗಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ, ಪಶು ಸಂಗೋಪನೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ- ಸುರೇಶ್ ಭವಾನಿ ಎಕ್ಸ್ ಪ್ರೆಸ್ ನ್ಯೂಸ್ ದೇವದುರ್ಗ