ನಂಜನಗೂಡಿನಲ್ಲಿ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಬೆಂಬಲಿತರಿಗೆ ಭಾರಿ ಮುಖಭಂಗವಾಗಿದ್ದು, ಹನ್ನೊಂದು ಸ್ಥಾನಗಳ ಪೈಕಿ ಕೇವಲ 1 ಸ್ಥಾನದಲ್ಲಿ ಬಿಜೆಪಿ ತೃಪ್ತಿಪಟ್ಟುಕೊಂಡಿದ್ದು, ಇನ್ನುಳಿದ ಹತ್ತು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಟಿಎಪಿಸಿಎಂ ಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಾಜಿ ಸಚಿವ ಮಹದೇವಪ್ಪ ಬೆಂಬಲಿಗರು ಪ್ರತ್ಯೇಕ ಬಣವಾಗಿ ಮಾರ್ಪಾಡಾಗಿ ಕಣಕ್ಕಿಳಿದಿದ್ದು ಯಾರೊಬ್ಬರು ಗೆಲ್ಲಲಾಗದೆ ಧೂಳಿಪಟವಾಗಿ ಮುಜುಗರಕ್ಕೀಡಾಗಿದ್ದಾರೆ. ಇದರಿಂದ ಬಿಜೆಪಿ ಬೆಂಬಲಿತರು ಹಾಗು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಬಣದ ಬೆಂಬಲಿಗರಿಗೆ ಭಾರೀ ಮುಖಭಂಗವಾದಂತಾಗಿದೆ. ಮಾಜಿ ಸಂಸದ ಆರ್ ಧ್ರುವನಾರಾಯಣ್ ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳು ಜಯದ ನಗೆ ಬೀರಿ ಕಾಂಗ್ರೆಸ್ ಗೆ ಬಲ ತಂದುಕೊಟ್ಟಿದೆ. ಟಿಎಪಿಸಿಎಂಎಸ್ ನ ಹಾಲಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಕುರಹಟ್ಟಿ ಮಹೇಶ್ 4 ಬಾರಿ ಗೆಲುವು ಸಾಧಿಸಿ 2 ಬಾರಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಗೆಲುವಿನೊಂದಿಗೆ ಸಿಹಿ ಹಂಚಿ ಪಟಾಕಿ ಸಿಡಿಸುವುದರ ಮೂಲಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ವರದಿ- ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು