ಪಿರಿಯಾಪಟ್ಟಣ: ಗ್ರಾಮದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ವಿದ್ಯಾರ್ಥಿಗಳ ಜೊತೆ ಅಧಿಕಾರಿಗಳು ಕೈಜೋಡಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ರಂಗಯ್ಯ ನವರು ತಿಳಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪಂಚಾಯಿತಿ ವತಿಯಿಂದ ಆಯೋಜಿಸಿದ ನಮ್ಮ ಗ್ರಾಮ ನಮ್ಮ ಯೋಜನೆ ಮತ್ತು ಮಕ್ಕಳ ಗ್ರಾಮಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳನ್ನು ಯುವಜನತೆ ಧೂಮಪಾನ ಮದ್ಯಪಾನ ಹಾಗೂ ಇನ್ನಿತರ ಸಮಾಜಘಾತುಕ ಕೆಲಸಗಳಿಗೆ ಬಳಕೆ ಮಾಡಿಕೊಂಡು ಶಾಲೆಯ ವಾತಾವರಣವನ್ನು ಹಾಳು ಮಾಡುತ್ತಿರುವುದು ಕಂಡುಬರುತ್ತಿದೆ ಗ್ರಾಮಸ್ಥರು ಈ ಬಗ್ಗೆ ಪಂಚಾಯಿತಿಗೆ ದೂರು ನೀಡಿದರೆ ಅಂತಹ ವ್ಯಕ್ತಿಗಳನ್ನು ಕಾನೂನು ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್ ಮಾತನಾಡಿ 2021-2022 ನೇ ಸಾಲಿನ ಹಣಕಾಸಿನ ವರ್ಷದಲ್ಲಿ ನರೇಗಾ ಯೋಜನೆಗೆ ಕ್ರಿಯಾ ಯೋಜನೆ ತಯಾರಿಸುತ್ತಿದ್ದು ಸಾರ್ವಜನಿಕರು ಸಮಸ್ಯೆಗಳಾದ ರಸ್ತೆ ನಿರ್ಮಾಣ, ಚರಂಡಿ,ಕೆರೆ ಹೂಳೆತ್ತುವುದು, ಕೃಷಿಹೊಂಡ ಇತ್ಯಾದಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅರ್ಜಿಯನ್ನು ನೀಡಿದರೆ ಕಾಮಗಾರಿಗಳನ್ನು ಮುಂದಿನ ಹಣಕಾಸು ವರ್ಷದಲ್ಲಿ ಪೂರೈಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾದ ರಕ್ಷಿತ ಎಂಬುವವರು ತಮ್ಮ ಮನೆಯ ಸಂಪರ್ಕದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ದುರಸ್ತಿ ಮಾಡಿಕೊಡುವಂತೆ ಸಭೆಯಲ್ಲಿ ವಿನಂತಿ ಮಾಡಿಕೊಂಡಳು.ಸಭೆಯಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಧರ್ಮೇಂದ್ರ, ವಿಜಯೇಂದ್ರ,ಚಿಕ್ಕೇಗೌಡ ಮುಖ್ಯಶಿಕ್ಷಕ ಮಹಾಲಿಂಗಯ್ಯ,ಶಿಕ್ಷಕ ಸತೀಶ್,ಪಂಚಾಯಿತಿ ಕರವಸೂಲಿಗಾರ ದೊಡ್ಡೇಗೌಡ,ಪ್ರವೀಣ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ-ಮಾಗಳಿ ರಾಮೇಗೌಡ ಪಿರಿಯಾಪಟ್ಟಣ