ನಾಗಮಂಗಲ: ಕೊರೋನಾ ಮತ್ತು ಗ್ರಾಮ ಪಂಚಾಯ್ತಿಯ ಎರಡನೇ ಹಂತದ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆ ಹನುಮ ಜಯಂತಿ ಆಚರಣೆ ಕಳೆಗುಂದಿದರೂ, ಇದೆಲ್ಲದರ ನಡುವೆಯೂ ನಾಡಿನ ಧಾರ್ಮಿಕ ಆಚರಣೆಗಳ ಸಂಸ್ಕಂತಿ ಮತ್ತು ಸಂಸ್ಕಾರಗಳ ಪ್ರತೀಕವಾಗಿ ಸಕ್ಕರೆನಾಡು ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಹನುಮ ಜಯಂತೋತ್ಸವ ಆಚರಿಸಲಾಯಿತು. ಗ್ರಾಮದ ದೇವಾಲಯದ ಪ್ರಾಂಗಣ ಮಾತ್ರವಲ್ಲದೇ ಇಡೀ ಗ್ರಾಮದ ಬೀದಿಗಳನ್ನು ತಳಿರು-ತೋರಣಗಳಿಂದಲ್ಲದೆ ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಸ್ವರ್ಣಲೇಪಿತ ಪಾಲಕ್ಕಿಯಲ್ಲಿರಿಸಲಾದ ಹನುಮಂತ ದೇವರ ಸರ್ವಾಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯ,ತಮಟೆಯ ನಾದ ಮತ್ತು ವೀರಗಾಸೆಯ ನೃತ್ಯ ಸೇರಿದಂತೆ ಹನುಮ ಮಾಲಧಾರಿಗಳಿಂದ ಭಜನೆಯಂತಹ ಗ್ರಾಮೀಣ ಸೋಗಡಿನ ಕಲಾಪ್ರಕಾರಗಳ ಪ್ರದರ್ಶನಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಬೀದಿಯುದ್ದಕ್ಕೂ ನಡೆದ ಪೂಜಾ ಕೈಂಕರ್ಯಗಳಿಗೆ ಜೈ ಶ್ರೀರಾಂ-ಜೈ ಜೈ ಶ್ರೀರಾಂ ಎಂಬ ಹರ್ಷೋದ್ಘಾರಗಳು ಮುಗಿಲು ಮುಟ್ಟುತ್ತಿದ್ದವು. ಹನುಮ ಧ್ವಜಗೊಂದಿಗೆ ಕೇಸರಿ ತೋರಣಗಳಿಂದ ದೇವಾಲಯವು ಅಯೋಧ್ಯೇಯ ರಾಮ ಮಂದಿರದಂತೆ ಬಿಂಬಿತವಾಗುತಿತ್ತು. ಪಂಚಾಮೃತ ಅಭಿಷೇಕಾದಿ ವಿಶೇಷವಾಗಿ ಅಲಂಕೃತಗೊಂಡಿದ್ದ ಮೂಲ ಮೂರ್ತಿಯ ದರ್ಶನ ಪಡೆದ ಸಹಸ್ರಾರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.
ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.