ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯು ಕಡಲೆಕಾಯಿ ಪರಿಷೆಯನ್ನು ನಡೆಸಲಾಯಿತು. ಆದಿ ಚುಂಚನಗಿರಿಯ ಪೀಠಾದ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿದ್ರು. ಇನ್ನೂ ಮೈಸೂರು ಮಹಾರಾಜರ ಕಾಲದಿಂದ ಪ್ರತಿ ವರ್ಷ ಸೂಲಾಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆಯುವ ಕಡಲೆಕಾಯಿ ಪರಿಷೆಗೆ ಜಡಲ ತಿಮ್ಮನಹಳ್ಳಿ ಗ್ರಾಮಸ್ಥರು ಆಂಜನೇಯ ಮೂರ್ತಿಯೊಂದಿಗೆ ತಮ್ಮ ಗ್ರಾಮದಿಂದ ದೀಪಾರತಿ ಮಾಡಿ ಮೆರವಣಿಗೆಯಲ್ಲಿ ದೇವಾಲಕ್ಕೆ ಬಂದ ನಂತರ ಆಂಜನೇಯ ಸ್ವಾಮಿ ರಥೋತ್ಸವ ನಡೆಸಿ ಕಡಲೆಕಾಯಿಯನ್ನು ಡಾ.ನಿರ್ಮಲಾನಂದನಾಥ ಶ್ರೀ ಗಳು ಜನತೆಯ ಮೇಲೆ ಎರಚುತ್ತಿದ್ರು. ಹೀಗೆ ಎರಚಿದ ಕಡಲೆಕಾಯಿಯನ್ನು ತಿಂದಲ್ಲಿ ರೋಗ ರುಜುನುಗಳು ಬರುವುದಿಲ್ಲವೆಂಬ ನಂಬಿಕೆ ಜನರಲ್ಲಿತ್ತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಕಡಲೆ ಕಾಯಿಯನ್ನು ಎರಚದೆ ಬಂದ ಭಕ್ತರಿಗೆ ನೇರವಾಗಿ ನೀಡಲಾಯ್ತು. ಕಡಲೆಕಾಯಿ ಪರಿಷೆಯಲ್ಲಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಸುದರ್ಶನ್, ಶ್ರೀ ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಯವರುಗಳು ಸೇರಿದಂತೆ ಹಲವಾರು ಗಣ್ಯರು ಹಾಗೂ ಶ್ರೀಮಠದ ಸದ್ಭಕ್ತರು ಹಾಜರಿದ್ದು ಗುರುದೇವತಾ ಕೃಪೆಗೆ ಪಾತ್ರರಾದರು.
ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ