ನಾಗಮಂಗಲ: ಕಳೆದ ಗ್ರಾಮ ಪಂಚಾಯತಿ ಚುನಾವಣೆಯ ರಾಜಕೀಯ ಘರ್ಷಣೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನೆಲಸಮವಾಗಿರುವ ಘಟನೆ ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನ ಹೊಣಕೆರೆ ಹೊಬಳಿಯ ಮಣ್ಣಹಳ್ಳಿ ಗ್ರಾಮದಲ್ಲಿ ನಡೆದಿದೆ. 2014-15 ನೇ ಸಾಲಿನ ನರೇಗಾ ಯೋಜನೆಯಡಿ ರೂ.9.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡಲಾಗಿದೆ ಎಂಬುವುದು ಟ್ರ್ಯಾಕ್ಟರ್ ಚಕ್ರದ ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸುಮಾರು 30 ಮೀಟರ್ಗೂ ಉದ್ದದ ಕಾಂಪೌಂಡ್ ನೆಲಸಮವಾಗಿರುವುದು ಸ್ಥಳೀಯ ಶಿಕ್ಷಣಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಈ ಸಂಬಂಧ ಡಿಸೆಂಬರ್ 31 ರ ರಾತ್ರಿ ಈ ಘಟನೆ ನಡೆದಿದೆ ಎಂದು ಶಾಲೆಯ ಮುಖ್ಯೋಪಧ್ಯಾಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಈ ಸಂಬಂಧ ನಾಗಭೂಷಣ್ ಮಾತನಾಡಿ 2014-15 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆಯ ಕ್ರಮದಂತೆ ರೂ.9.50 ವೆಚ್ಚದಲ್ಲಿ ಶಾಲೆಯ ಕಾಂಪೌಂಡ್ ನಿರ್ಮಿಸಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ರೂ.2.50 ಲಕ್ಷ ಸಪ್ಲೆ ಬಿಲ್ ಆಗಿರಲಿಲ್ಲ. ಆದರೂ ಮಕ್ಕಳ ಹಿತದೃಷ್ಟಿಯಿಂದ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.ಆದರೆ ಮೊನ್ನೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸೋಲು ಅನುಭವಿಸಿದ ನಟರಾಜ್ ಎಂಬುವರು ನನ್ನ ಪರ ಗೆಲುವಿಗೆ ಸಹಕರಿಸಲಿಲ್ಲ ಎಂಬ ಕಾರಣದಿಂದ ನನಗೆ ಸಪ್ಲೆ ಬಿಲ್ ತಡೆಯುವ ಉದ್ದೇಶದಿಂದ ಇಡೀ ಕಾಂಪೌಂಡ್ ನೆಲಸಮಗೊಳಿಸಿದ್ದಾರೆ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.
ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.