ನಾಗಮಂಗಲ: ಸಕ್ಕರೆನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನ ಸಾಂಸ್ಕøತಿಕ, ಕ್ರೀಡಾ ಮತ್ತಿತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕುವೆಂಪು ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಪತಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಮಾಜಮುಖಿ ಸಾಧನಾ ಶೀಲರಾಗಬೇಕಾದರೆ ವಿದ್ಯಾರ್ಥಿಗಳ ಮನಸ್ಸು ಶೃತಿ ಮಾಡಿದ ವೀಣೆಯಂತಿರಬೇಕು.ಸಮಾಜಮುಖಿ ಸೇವೆ ಸಲ್ಲಿಸುವ ವಿಜ್ಞಾನಿ, ಕವಿ ಹಾಗೂ ವಿದ್ಯಾರ್ಥಿಗಳ ಮನಸ್ಸು ಚಂಚಲತೆ ಹಾಗೂ ಸಂಕುಚಿತ ಮನೋಭಾವನೆಯಿಂದ ಮುಕ್ತವಾಗಿರಬೇಕು. ಮನಸ್ಸು ಸುಧಾರಣೆಗೊಂಡರೆ ನಮ್ಮ ನಡೆ-ನುಡಿಯಲ್ಲಿ ಸ್ವರ್ಗ ಎಂಬುದನ್ನು ಕಾಣಬಹುದು. ಮನಸ್ಸೆಂಬುದು ಯಾವ ವ್ಯಕ್ತಿಯಲ್ಲಿ ಶಿಸ್ತಿನಿಂದ ಕೂಡಿರುತ್ತದೆಯೋ ಆ ವ್ಯಕ್ತಿ ಮಾತ್ರ ಸಾಧನೆಯ ಶಿಖರವನ್ನೇರಲು ಸಾಧ್ಯ ಎಂದರು.ಇನ್ನೂ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ನಾದಬ್ರಹ್ಮ ಡಾ.ಹಂಸಲೇಖ ಮಾತನಾಡಿ, ಆಧ್ಯಾತ್ಮಿಕತೆಯ ಮನೋಬಲವಿದ್ದರೆ ತಪ್ಪುಗಳು ಕಡಿಮೆಯಾಗುತ್ತವೆ. ದೈನಂದಿನ ಬದುಕಿಗೆ ಭಕ್ತಿ ಇರಲಿ. ಪ್ರತಿ ಮನುಷ್ಯನ ಬದುಕಿನಲ್ಲಿ ಬರುವ ಸೋಲುಗಳು ಸಾರ್ಥಕ ಜೀವನದ ಊರುಗೋಲುಗಳಾಗಿ ಮಾಡಿಕೊಂಡರೆ ಸೋಲುಗಳು ಸಾದನೆಗಳಾಗುತ್ತವೆ. ಗುರು ಎಂದರೆ ಗುರುತ್ವ ಎಂಬ ಪರಮಶಕ್ತಿಯಾಗಿದೆ, ಆದ್ದರಿಂದ ಗುರಗಳ ಮಾರ್ಗದರ್ಶನಕ್ಕೆ ಗರು ಎಂಬ ಶಕ್ತಿಯ ಅನುಪಸ್ಥಿತಿಯಲ್ಲೂ ಸರಿದಾರಿ ತೋರುವ ಗುರುತ್ವಾಕರ್ಷಣೆ ಬಲವಿದೆ. ಇಂತಹ ಗುರುಪರಂಪರೆಯ ನೆರಳಿನ ವಿದ್ಯೆ ನಿಮ್ಮ ಭವಿಷ್ಯದ ಬದುಕು ಉಜ್ವಲವಾಗಿರಲಿ ಎಂದು ಹಾರೈಸಿದರು. ಇನ್ನೂಇದೇ ವೇದಿಕೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಬಿ.ಕೆ.ಲೋಕೇಶ್ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಬಸವೇಗೌಡ, ತೇಜಸ್ವಿನಿ ಹಂಸಲೇಖ, ಉಪನ್ಯಾಸಕರಾದ ರಾಮಕೃಷ್ಣೇಗೌಡ ಮತ್ತು ದೇವಾನಂದ್ ಮತ್ತೀತರು ಉಪಸ್ಥೀತರಿದ್ದರು.
ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.