ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ,ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ತೆಲುಗು ಆರಾಧ್ಯ ದೈವ ದಿವಂಗತ ಎನ್.ಟಿ. ರಾಮರಾವ್ ಅವರ ಪುತ್ರ ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕರು ಆದಂತಹ ನಂದಮೂರಿ ಬಾಲಕೃಷ್ಣ ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೂಪುರ ಕ್ಷೇತ್ರಕ್ಕೆ ಹೋಗಲು ಗೌರಿಬಿದನೂರು ಮುಖಾಂತರ ಹಾದು ಹೋಗಿದ್ದಾರೆ.ಇನ್ನೂ ತಮ್ಮ ನೆಚ್ಚಿನ ನಟನ ಆಗಮನದ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ ಗೇಟ್ ಬಳಿ ರಸ್ತೆಯ ಎರಡೂ ಕಡೆ ನಿಂತು ಸ್ವಾಗತ ಕೋರಿ ಅವರ ಕಾರನ್ನು ತಡೆದು ಮಾಲಾರ್ಪಣೆ ಮಾಡಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.ಅಭಿಮಾನಿಗಳನ್ನು ಕಂಡು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಅಭಿಮಾನಿಗಳ ಅಭಿಮಾನ ಹಾಗೂ ಅವರ ಪ್ರೀತಿಯನ್ನು ಕಂಡು ಎಲ್ಲರಿಗೂ ಕೈಮುಗಿದು ಹಿಂದೂಪುರ ಕಡೆ ಹೊರಟಿದ್ದಾರೆ.ತೆಲುಗು ಪ್ರಭಾವವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದರಲ್ಲೂ ಎನ್.ಟಿ.ಆರ್. ಮತ್ತು ಅವರ ಕುಟುಂಬದವರೆಂದರೆ ಜಿಲ್ಲೆಯ ಜನತೆಗೆ ಬಹು ಅಭಿಮಾನ, ಮತ್ತು ಅವರ ಹೆಸರಿನಲ್ಲಿ ಈಗಲೂ ಜಿಲ್ಲೆಯಲ್ಲಿ ಅಭಿಮಾನಿ ಸಂಘಗಳು ಜೀವಂತವಾಗಿದ್ದು ಉತ್ತಮವಾದ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತಿವೆ. ರಸ್ತೆ ಮಾರ್ಗವಾಗಿ ನಂದಮೂರಿ ಬಾಲಕೃಷ್ಣ ಹಾದು ಹೊಗುವ ವಿಷಯ ತಿಳಿಯುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಜನ ಸಾಗರವೇ ನೆರೆದಿದ್ದು ನಟನ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿತ್ತು.
ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ