ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಮಡೆದ ಸ್ಫೋಟದಲ್ಲಿ ಮೃತಪಟ್ಟವರಿಗೂ ಪರಿಹಾರ


ಬಾಯ್ಲರ್ ಸ್ಫೋಟದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಬೆಳಗಾವಿ(ಸುವರ್ಣಸೌಧ), ಡಿ.17- ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಸಾವನ್ನಪ್ಪಿದ ನಾಲ್ಕು ಮಂದಿಗೂ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಘೋಷಣೆ ಮಾಡಿದರು. ವಿಧಾನಸಭೆಯ ಸಂತಾಪ ಸೂಚಕ ವೇಳೆ ಮುಧೋಳ ಕ್ಷೇತ್ರದ ಗೋವಿಂದ ಕಾರಜೋಳ ಹಾಗೂ ಪ್ರತಿ ಪಕ್ಷದ ನಾಯಕ ಯಡಿಯೂರಪ್ಪ ಅವರು ಬಾಯ್ಲರ್ ಸ್ಫೋಟದ ಘಟನೆಯನ್ನು ಸವಿಸ್ತಾರವಾಗಿ ಬಿಡಿಸಿಟ್ಟರು.

ಗೋವಿಂದ ಕಾರಜೋಳ ಅವರು ಮಂಡ್ಯದ ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಮತ್ತು ಕಿಚ್ಚುಗುತ್ತಿ ಮಾರಮ್ಮ ದೇವಿ ವಿಷ ಪ್ರಸಾದ ಸೇವನೆಯಲ್ಲಿ ಮೃತಪಟ್ಟವರಿಗೆ ಸರ್ಕಾರ ಪರಿಹಾರ ನೀಡಿದಂತೆ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಮಡೆದ ಸ್ಫೋಟದಲ್ಲಿ ಮೃತಪಟ್ಟವರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸಮ್ಮತ್ತಿಸಿದ ಪರಮೇಶ್ವರ್ ಅವರು, ಐದು ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಗೋವಿಂದ ಕಾರಜೋಳ ಅವರು ಘಟನೆ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ, ನಿರಾಣಿ ಸಕ್ಕರೆ ಕಾರ್ಖಾನೆ ಘಟಕ ಜನವಸತಿ ಪ್ರದೇಶದಲ್ಲಿದೆ. ಅದೃಷ್ಟವಶಾತ್ ಇಲ್ಲಿ ಹೆಚ್ಚಿನ ದುರಂತ ಸಂಭವಿಸಿಲ್ಲ. ನಗರದ ಹೊರ ಭಾಗದಲ್ಲಿರುವ ಕಾರ್ಖಾನೆಯ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲಿ ಅಕ್ಕಪಕ್ಕ ಜನವಸತಿ ಇರಲಿಲ್ಲ. 15 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಐದು ಮಂದಿಗೆ ಗಾಯಗಳಾಗಿವೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಸಾವನ್ನಪ್ಪಿದವರು ಅತ್ಯಂತ ಚಿಕ್ಕ ವಯಸ್ಸಿನವರು. ಸಣ್ಣ ಸಣ್ಣ ಮಕ್ಕಳಿವೆ. ಘಟನೆಯಲ್ಲಿ ಎರಡು ಹಂತಸ್ತಿನ ಕಟ್ಟಡ ಸಂಪೂರ್ಣ ಕುಸಿದಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ತಲಾ ಐದು ಲಕ್ಷ ಪರಿಹಾರ ನೀಡಿದ್ದಾರೆ. ಮೃತಪಟ್ಟ ಕುಟುಂಬದವರು 25 ಲಕ್ಷ ಪರಿಹಾರಕ್ಕಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಶವ ಎತ್ತಿರಲಿಲ್ಲ. ನಾನು ಅವರ ಮನವೊಲಿಸಿ ತಡರಾತ್ರಿ 11 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಗಿದೆ. ಕಾರ್ಖಾನೆ ಮಾಲೀಕರಾದ ನಿರಾಣಿ ಅವರು ಮೃತಪಟ್ಟ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದಾಗಿ, ಅವರ ಮಕ್ಕಳ ವಿದ್ಯಾಭ್ಯಾಸ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Please follow and like us:

Related posts

Leave a Comment