ವಿಜಯಪುರ: ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳು ವಿಶ್ವದಲ್ಲೇ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ಮಾಡಿರುವ ಕಾಯಕಕ್ಕೆ ಭಾರತರತ್ನ ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಎಲ್ಲೆಡೆಯಿಂದ ಜನರು ಆಗ್ರಹಿಸುತ್ತಿದ್ದಾರೆ. ಭಾರತ ರತ್ನ ನೀಡದಿದ್ದರೂ ಶ್ರೇಷ್ಠ ಸಂತರಾಗಿ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅವರ ಹೆಸರನ್ನು ಕೇಂದ್ರ ಸರ್ಕಾರ ಈ ಬಾರಿ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕಾಗಿತ್ತು. ಶ್ರೀಗಳಿಗೆ ಭಾರತ ರತ್ನ ಕೊಡಿಸುವಲ್ಲಿ ಲೋಕಸಭಾ ಹಾಗು ರಾಜ್ಯ ಸಭಾ ಸದಸ್ಯರು ಪ್ರಯತ್ನ ಮಾಡಬೇಕು. ಅನ್ಯಾಯವಾದಾಗ ಪ್ರತಿಭಟನೆ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಹಿಂದೆ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕಾದರೆ ಆಂಧ್ರಪ್ರದೇಶದ ಸರ್ಕಾರ ವಿರೋಧ ಮಾಡಿತ್ತು. ಆಗ ವಾಜಪೇಯಿ ಪ್ರಧಾನಿಯಾಗಿದ್ದಾಗ ನಾನು ಕೇಂದ್ರ ಸಚಿವನಿದ್ದೆ. ಜಲಾಶಯದ ಎತ್ತರಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದೆವು. ಅದೇ ಮಾದರಿಯಲ್ಲಿ ಈಗ ಹೋರಾಡಬೇಕಿದೆ. ತ್ರಿವಿಧ ದಾಸೋಹಿಗೆ ಭಾರತ ರತ್ನ ಕೊಡಬೇಕೆಂದು ನಾನು ಪ್ರಧಾನಿಗಳಿಗೆ ಒತ್ತಾಯ ಮಾಡುತ್ತೇನೆ. ಭಾರತ ರತ್ನ ಕೊಡದಿದ್ದರೆ ಪ್ರತಿಭಟನೆ ಮಾಡಿ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡದಿದ್ದರೆ ಉಗ್ರ ಹೋರಾಟ ಮಾಡ್ತೀವಿ: ಶಾಸಕ ಯತ್ನಾಳ್

Please follow and like us: